Articles Category

ಕೃಷಿ ವಿಧಾನಗಳು:  Farming methods

soil management

ಕೃಷಿ ವಿಧಾನಗಳು:  Farming methods

ಮಾನವ ಸಂಸ್ಕೃತಿ ಮತ್ತು ನಾಗರಿಕತೆಗಳ ಮೂಲ ಸೆಲೆಯೇ ಕೃಷಿ. ಗೆಡ್ಡೆಗೆಣಸು ಸಂಗ್ರಹಿಸುವ ಮತ್ತು ಬೇಟೆಯಾಡುತ್ತಿದ್ದ ಮಾನವ ಕ್ರಮೇಣ ಕೃಷಿಗಾಗಿ ಒಂದು ಜಾಗದಲ್ಲಿ ನೆಲೆಯೂರಿದಾಗ ನಾಗರಿಕತೆಯ ಉಗಮವಾಯಿತು ಎಂಬ ನಂಬಿಕೆಯಿದೆ. ಈ ರೀತಿ ಕೃಷಿಗಾಗಿ ಒಂದೆಡೆ ನೆಲೆಯೂರಿದ್ದರಿಂದಲೇ ಆರ್ಥಿಕತೆ ಮತ್ತು ಸಂಸ್ಕೃತಿಯೂ ಕೂಡ ಅಭಿವೃದ್ಧಿಯಾಯಿತು. ವ್ಯವಸಾಯ ಎನ್ನುವುದು ಭಾರತದ ರೈತನಿಗೆ ಜೀವನೋಪಾಯದ ಒಂದು ವಿಧಾನವಷ್ಟೇ ಆಗಿರದೆ, ಅವನ ದಿನನಿತ್ಯದ ಹಾಗೂ ಸಾಂಸ್ಕೃತಿಕ ಜೀವನ ವಿಧಾನವೂ ಆಗಿತ್ತು. ಭಾರತೀಯ ಕೃಷಿಯಲ್ಲಿ ಕೆಲವು ದಶಕಗಳ ಹಿಂದಿನವರೆಗೂ ಮಹತ್ತರ ಬದಲಾವಣೆಗಳೇನೂ ಇರಲಿಲ್ಲ. ಪೂರ್ವಜರಿಂದ ಪಾರಂಪರಿಕವಾಗಿ ಪಡೆದ ಜ್ಞಾನ ಮತ್ತು ಅನುಭವದಿಂದ ರೈತರು ತಮ್ಮ ಬದುಕನ್ನು ಸಹಜವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಹಿಂದಿನ ಕಾಲದಲ್ಲಿ ರೈತನ ಕೃಷಿಯ ಹಾಗೂ ಕೌಟುಂಬಿಕ ಅವಶ್ಯಕತೆಗಳು ಕೆಲವು ಮೂಲಭೂತ ವಿಷಯಕ್ಕಷ್ಟೇ ಸೀಮಿತವಾಗಿದ್ದವು. ಬೇರೆಯವರ ತೋಟದಲ್ಲಿ ಕೃಷಿಯಲ್ಲಿ ತೊಡಗಿಕೊಂಡರೆ,  ಕೊಯ್ಲಿನ ಸಮಯದಲ್ಲಿ ಕೃಷಿ ಉತ್ಪನ್ನಗಳ ರೂಪದಲ್ಲಿಯೇ ಅವರಿಗೆ ಪ್ರತಿಫಲವನ್ನು ಕೊಡಲಾಗುತಿತ್ತು. ಆದರೆ ಈಗ ಆಧುನಿಕ ಕೃಷಿ ವಿಧಾನಗಳಿಂದ ಹಾಗೂ ಜಾಗತೀಕರಣಗಳಿಂದಾಗಿ, ರೈತರು ತಮ್ಮ ಪಾಡಿಗೆ ತಾವು ಕೃಷಿಯಲ್ಲಿ ತೊಡಗುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಏಕೆಂದರೆ ಈ ಸ್ಪರ್ಧಾತ್ಮಕ ಕಾಲದಲ್ಲಿ, ಕೃಷಿ ವಿಧಾನಗಳ ಅಭಿವೃದ್ಧಿ, ವ್ಯವಸಾಯ ಕ್ಷೇತ್ರದಲ್ಲಾಗುತ್ತಿರುವ ಮಹತ್ವದ ಘಟನೆಗಳು, ಕೃಷಿಯ ರೂಪುರೇಷೆಗಳಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಪ್ರತಿಯೊಬ್ಬ ರೈತನೂ ತಿಳಿದಿಯಬೇಕಾದದ್ದು ಅಗತ್ಯ. ಇಂತಹ ಎಲ್ಲಾ ಮಾಹಿತಿಗಳನ್ನು ಸುಲಭವಾಗಿ ಅರ್ಥವಾಗುವಂತೆ ತಿಳಿಯಬೇಕಾದರೆ ನಮ್ಮ “ನೇಗಿಲ ಯೋಗಿ” ಅಪ್ಲಿಕೇಶನ್ ನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ. ನಮ್ಮ ಅಪ್ಲಿಕೇಶನ್ ನಲ್ಲಿ ಸಹಜ ಕೃಷಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನೂ ಅತ್ಯಂತ ಸರಳವಾಗಿ ತಿಳಿಸಲಾಗುತ್ತದೆ. 

ಇನ್ನು, ನಮ್ಮ ದೇಹ ಅರೋಗ್ಯವಾಗಿರಲು ಪೌಷ್ಟಿಕ ಆಹಾರ ಅಗತ್ಯ. ಹಾಗೆಯೇ, ಗಿಡಗಳನ್ನು ಅರೋಗ್ಯಪೂರ್ಣವಾಗಿ ಬೆಳೆಸಲು ಅವುಗಳಿಗೆ ಗೊಬ್ಬರದ ಅಗತ್ಯವಿದೆ. ಹಾಗೆಯೇ, ರೋಗ ಹಾಗೂ ಕೀಟಗಳಿಂದ ರಕ್ಷಿಸಲು ಔಷಧಿಗಳನ್ನು ಸಿಂಪಡಿಸುವ ಅವಶ್ಯಕತೆಯೂ ಇರುತ್ತದೆ. ಗಿಡಗಳ ಆರೈಕೆಗೆ ನಾವು ಯಾವ ರೀತಿಯ ಗೊಬ್ಬರ ಮತ್ತು ಔಷಧಿಗಳನ್ನು ಬಳಸುತ್ತೇವೆಯೋ, ಅದರ ಆಧಾರದ ಮೇಲೆ ಆ ಕೃಷಿಯು ರಾಸಾಯನಿಕವೇ ಸಾವಯವವೇ ಅಥವಾ ಸಹಜವೇ ಎಂಬುದು ನಿರ್ಧರಿತವಾಗುತ್ತದೆ. ಮೊದಲಿಗೆ ನಾವು ಸಹಜ ಕೃಷಿ, ಸಾವಯವ ಕೃಷಿ ಹಾಗೂ ರಾಸಾಯನಿಕ ಕೃಷಿಗಳ ಅರ್ಥ ಏನೆಂದು ತಿಳಿದುಕೊಳ್ಳೋಣ. 

ಸಹಜ ಕೃಷಿ: Natural Farming:

ಸಾಮಾನ್ಯವಾಗಿ ನಮ್ಮ ಜನರಲ್ಲಿರೋ ನಂಬಿಕೆ ಎಂದರೆ ಸಹಜ ಕೃಷಿ ಹಾಗೂ ಸಾವಯವ ಕೃಷಿ ಎರಡೂ ಒಂದೇ ಎಂಬುದು. ಆದರೆ, ಸಾವಯವ ಕೃಷಿಯು ಸಹಜ ಕೃಷಿಯ ಒಂದು ವಿಧಾನ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಅನುಸರಿಸುತ್ತಿದ್ದುದು ಸಹಜ ಕೃಷಿ ಪದ್ದತಿಯನ್ನೇ. ಆಪತ್ಕಾಲದಲ್ಲಿ ರಾಸಾಯನಿಕ ಅಥವಾ ಸಾವಯವ ಗೊಬ್ಬರಗಳು ದೊರಕುವುದು ಕಠಿಣವಾದ ಪಕ್ಷದಲ್ಲಿ, ಈ ಸಹಜ ಕೃಷಿಯು ಬಹಳ ಸರಳ ಹಾಗೂ ಉಪಯುಕ್ತವಾಗಿರುತ್ತದೆ. ಸಹಜ ಕೃಷಿ ಪದ್ದತಿಯು ಸಂಪೂರ್ಣ ಸ್ವಾವಲಂಬಿ ಕೃಷಿಯಾಗಿದ್ದು, ಈ ಪದ್ಧತಿಯಲ್ಲಿ ಬೆಳೆಸಿದ ತರಕಾರಿ, ಹಣ್ಣುಗಳು, ಹಾಗೆಯೇ ಔಷಧಿ ವನಸ್ಪತಿಗಳು ಸಂಪೂರ್ಣ ವಿಷರಹಿತ ಮತ್ತು ಆರೋಗ್ಯಕರವಾಗಿರುತ್ತವೆ. ಪದ್ಮಶ್ರೀ ಪುರಸ್ಕೃತ ಶ್ರೀ. ಸುಭಾಷ ಪಾಳೇಕರ ಇವರು ‘ಸುಭಾಷ ಪಾಳೇಕರ ನೈಸರ್ಗಿಕ ಕೃಷಿ’ ಎನ್ನುವ ಸಹಜ ಕೃಷಿತಂತ್ರವನ್ನು ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಿದರು. ಇದರಲ್ಲಿ ದೇಸೀ ಹಸುವಿನ ಸೆಗಣಿ ಮತ್ತು ಗೊಮೂತ್ರ, ಹಾಗೆಯೇ ಸಹಜವಾಗಿ ದೊರಕುವ ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ಜೀವಾಮೃತ, ಬೀಜಾಮೃತಗಳಂತಹ ಗೊಬ್ಬರ ಮತ್ತು ಔಷಧಿಗಳನ್ನು ತಯಾರಿಸಿ ಉಪಯೋಗಿಸಲಾಗುತ್ತದೆ.

 ಸಹಜ ಕೃಷಿಯನ್ನು ಶೂನ್ಯ ಬಂಡವಾಳ ಕೃಷಿ ಎಂದೂ ಕೂಡ ಕರೆಯಬಹುದು. ಹೆಚ್ಚು ದುಡ್ಡು ಖರ್ಚು ಮಾಡದೆ ಬೆಳೆ ಬೆಳೆಯುವ ತಂತ್ರವೇ ಈ ಸಹಜ ಕೃಷಿ ವಿಧಾನ. ಬಿತ್ತನೆ ಬೀಜ, ಕೀಟನಾಶಕ, ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರಕ್ಕಾಗಿ ಸರದಿಯಲ್ಲಿ ಕಾದು ನಿಂತು ಹಣ ಹಾಗೂ ಸಮಯ ಖರ್ಚು ಮಾಡಿ ಬೆಳೆ ಬೆಳೆಯುವುದರ ಬದಲಿಗೆ, ಕೊಟ್ಟಿಗೆಯಲ್ಲಿನ ಆಕಳಿನ ಸಗಣಿ, ಗಂಜಲ, ಬದುವಿನ ಮಣ್ಣು ಬಳಸಿ ಬೆಳೆ ಬೆಳೆಯುವುದೇ ಸಹಜ ಕೃಷಿ ತಂತ್ರ. ಇಲ್ಲಿ ರಸಗೊಬ್ಬರ, ಕೀಟನಾಶಕಗಳ ಅಗತ್ಯವಿಲ್ಲ, ಕೊಟ್ಟಿಗೆಯಲ್ಲಿ ಒಂದು ದೇಸಿ ಆಕಳು ಇದ್ದರೆ ಸಾಕು, ಹೆಚ್ಚಿನ ಖರ್ಚಿಲ್ಲದೆ ಸಹಜ ಕೃಷಿ ಕೈಗೊಳ್ಳಬಹುದು. ಈ ವಿಧಾನದಿಂದ ನೈಸರ್ಗಿಕವಾಗಿ ಬೆಳೆಗಳನ್ನು ಬೆಳೆಯುವುದಲ್ಲದೆ ಮಣ್ಣಿನ ಸಂರಕ್ಷಣೆಯನ್ನೂ ಸಹ ಮಾಡಬಹುದು ಎನ್ನುವುದೇ ವಿಶೇಷ. ಹಾಗೇ, ಸಹಜ ಕೃಷಿಯು ಅತೀ ಕಡಿಮೆ ಬಂಡವಾಳವನ್ನು ಒಳಗೊಂಡಿರುವುದರಿಂದ ನಷ್ಟದ ಮಾತೇ ಇಲ್ಲ! ಸಹಜ ಕೃಷಿಯಲ್ಲಿ ಹಲವಾರು ವಿಧಗಳಿವೆ, ಅದರಲ್ಲಿ ಒಂದು ಸಾವಯವ ಕೃಷಿ. 

ಸಾವಯವ ಕೃಷಿ: Organic Farming

ನಿರುಪಯುಕ್ತ ನೈಸರ್ಗಿಕ ಪದಾರ್ಥಗಳ ಮೇಲೆ ಅನೇಕ ಪ್ರಕ್ರಿಯೆಗಳನ್ನು ನಡೆಸಿ ಸಾವಯವ ಗೊಬ್ಬರಗಳನ್ನು ತಯಾರಿಸಲಾಗುತ್ತದೆ. ಕಂಪೋಸ್ಟ್ ಗೊಬ್ಬರ, ಎರೆಹುಳ ಗೊಬ್ಬರ, ಮಾರುಕಟ್ಟೆಯಲ್ಲಿನ ತರಕಾರಿಗಳ ಕಸ, ನಗರಗಳಲ್ಲಿನ ಕಸ, ಪ್ರಾಣಿಗಳ ಎಲುಬಿನ ಚೂರುಗಳು, ಮೀನಿನ ಗೊಬ್ಬರ, ಕೋಳಿಯ ಗೊಬ್ಬರ ಹಾಗೂ ಪೇಟೆಯಲ್ಲಿ ಸಿಗುವ ಸಾವಯವ ಗೊಬ್ಬರಗಳನ್ನು ಸಾವಯವ ಕೃಷಿಯಲ್ಲಿ ಉಪಯೋಗಿಸಲಾಗುತ್ತದೆ. ಪೇಟೆಯಲ್ಲಿ ದೊರಕುವ ಜನಪ್ರಿಯ ಸಾವಯವ ಗೊಬ್ಬರವೆಂದರೆ ‘ಸ್ಟೆರಾಮೀಲ್’. ಇದರಲ್ಲಿ ಎಲುಬುಗಳ ಪುಡಿಯೂ ಇರುತ್ತದೆ. ಹಾಗೆಯೇ, ‘ಕಂಪೋಸ್ಟ್ ಗೊಬ್ಬರ’ ಎಂದರೆ ಬೇರೆಬೇರೆ ಕಸವನ್ನು ಒಂದರಮೇಲೊಂದು ಹಾಕಿ ಅದನ್ನು ಕೊಳೆಸಿ ತಯಾರಿಸಿದ ಗೊಬ್ಬರ ಎಂದು ಹೇಳಬಹುದು.

ಸಾವಯವ ಕೃಷಿಗಳಲ್ಲಿ ಈ ರೀತಿ ಹೆಚ್ಚು ಪ್ರಕ್ರಿಯೆಯನ್ನು ಮಾಡಿದ ಗೊಬ್ಬರಗಳನ್ನು ಬಳಸುವುದರಿಂದ ಆ ಗೊಬ್ಬರಗಳು ತುಂಬಾ ದುಬಾರಿಯಾಗಿರುತ್ತವೆ, ಹಾಗೆಯೇ ಅವುಗಳಲ್ಲಿ ಆರ್ಸೆನಿಕ್, ಸೀಸಗಳಂತಹ ವಿಷಕಾರಿ ಧಾತುಗಳೂ ಇರುವ ಸಾಧ್ಯತೆಯಿದೆ. ಈ ಧಾತುಗಳಿಂದ ಶರೀರದ ಮೇಲೆ ದುಷ್ಪರಿಣಾಮವಾಗಬಹುದು. ಈ ಪದ್ಧತಿಯೂ ಪರಾವಲಂಬಿಯಾಗಿರುವುದರಿಂದ ಆಪತ್ಕಾಲಕ್ಕಾಗಿ ಉಪಯುಕ್ತವಾದ ಪದ್ಧತಿಯಲ್ಲ. 

ಆರೋಗ್ಯದ ಮೇಲೆ ರಾಸಾಯನಿಕ ಕೃಷಿಯು ಬೀರುವ ಭೀಕರ ದುಷ್ಪರಿಣಾಮಗಳು ಗಮನಕ್ಕೆ ಬಂದ ನಂತರ ವಿದೇಶಗಳಲ್ಲಿ ಸಾವಯವ ಕೃಷಿ ಪ್ರಾರಂಭವಾಯಿತು. ಅನಂತರ ಈ ಪದ್ಧತಿಯು ಭಾರತಕ್ಕೆ ಬಂದಿತು. ಹಾಗಾಗಿ, ಇದು ಮೂಲ ಭಾರತೀಯ ಪದ್ಧತಿಯಲ್ಲ!

ರಾಸಾಯನಿಕ ಕೃಷಿ: Chemical Farming

ಎರಡನೇ ಮಹಾಯುದ್ಧದ ನಂತರ, ಹೆಚ್ಚಾದ ಬೇಡಿಕೆಯಿಂದಾಗಿ ವಿದೇಶಗಳಲ್ಲಿ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯಲು, ದೊಡ್ಡ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬಳಸಲು ಪ್ರಾರಂಭಿಸಲಾಯಿತು,  ನಂತರ ಭಾರತದಲ್ಲಿ ಕೂಡ ಅದನ್ನು ಜಾರಿಗೆ ತರಲಾಯಿತು ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ರಾಸಾಯನಿಕ ಕೃಷಿಯಲ್ಲಿ ಮನುಷ್ಯರು ತಯಾರಿಸಿದ ವಿಷಕಾರಿ ರಾಸಾಯನಿಕ ಗೊಬ್ಬರ ಮತ್ತು ಔಷಧಗಳನ್ನು ಬಳಸಲಾಗುತ್ತದೆ. ಇವುಗಳನ್ನು ಉಪಯೋಗಿಸುವುದರಿಂದ ವಾತಾವರಣದ ಮೇಲೆ, ಹಾಗೆಯೇ ನಮ್ಮ ಆರೋಗ್ಯದ ಮೇಲೆಯೂ ಅನೇಕ ಭೀಕರ ದುಷ್ಪರಿಣಾಮಗಳಾಗುತ್ತಿರುವುದು ನಮ್ಮ ಕಣ್ಣ ಮುಂದಿದೆ. ವಿಷಕಾರಿ ರಾಸಾಯನಿಕ ಗೊಬ್ಬರಗಳನ್ನು ಮತ್ತು ಔಷಧಗಳನ್ನು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ತಯಾರಿಸುತ್ತಾರೆ. ಆದುದರಿಂದ ಆಪತ್ಕಾಲದಲ್ಲಿ ಅವು ಸಿಗಲಾರವು, ಹಾಗೆಯೇ ಆರೋಗ್ಯದ ದೃಷ್ಟಿಯಿಂದ ಕೂಡ ಈ ಪದ್ಧತಿಯನ್ನು ಪರಿಗಣಿಸಲಾಗುವುದಿಲ್ಲ.

 ಸಹಜ ಕೃಷಿಯ ವಿಧಗಳು : Types of Organic Farming:

ಹೆಚ್ಚಿನವರು ಸಹಜ ಕೃಷಿ ಹಾಗೂ ಸಾವಯವ ಕೃಷಿ ಎರಡೂ ಒಂದೇ ಎಂದು ತಿಳಿದುಕೊಂಡಿರುತ್ತಾರೆ. ಎರಡೂ ವಿಧಾನಗಳೂ ಹಾನಿಕಾರಿಕ ರಾಸಾಯನಿಕಗಳಿಂದ ಮುಕ್ತವಾಗಿರುತ್ತವೆ ಎಂಬುದು ನಿಜ, ಆದರೆ ಸಹಜ ಕೃಷಿಯ ಹಲವಾರು ವಿಧಾನಗಳಲ್ಲಿ ಸಾವಯವ ಪದ್ದತಿಯೂ ಒಂದು. ಹಾಗಾದರೆ, ಸಹಜ ಕೃಷಿಯಲ್ಲಿ ಎಷ್ಟು ವಿಧಗಳಿವೆ ಬಗ್ಗೆ ತಿಳಿಯಲು ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ….

ಇದನ್ನು ಓದಿ.. ಮಣ್ಣಿನ ನಿರ್ವಹಣೆ: Soil Managment

ದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ.

 

Leave a Reply

Your email address will not be published. Required fields are marked *